ರಾಯಚೂರು( ಸಿರವಾರ ) : ರಾಜ್ಯದಲ್ಲಿ ಮಳೆ ಅಭಾವದಿಂದ ಬರಗಾಲ ಘೋಷಣೆಯಾಗಿದ್ದರೂ ಸಹ ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಬರಗಾಲದಲ್ಲೂ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಬರಗಾಲಕ್ಕೊಳಗಾದ ರೈತರು ಪರಿಹಾರಕ್ಕೆ ಸಂಬಂಧಪಟ್ಟ ಕಚೇರಿಗಳಿಗೆ ದಾಖಲೆ ನೀಡಬೇಕು ಅದರಂತೆ ದಾಖಲೆ ನೀಡುವ ವೇಳೆ ಗ್ರಾಮ ಪಂಚಾಯತಿ ಸಿಬ್ಬಂದಿಯೇ ರೈತರ ಬಳಿ ಹಣ ವಸೂಲಿಗೆ ಇಳಿದಿದ್ದಾರೆ.
ಹೌದು… ದೇವಸ್ಥಾನದ ಬಳಿ ಕುಳಿತು ಪಹಣಿ ಜೊತೆ ಹಣ ವಸೂಲಿ ಮಾಡುತ್ತಿರುವ ಗ್ರಾಮ ಲೆಕ್ಕಿಗನ ವೀಡಿಯೋ ವೈರಲ್ ಆಗಿದೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಿರವಾರ ತಾಲೂಕು ಗಣದಿನ್ನಿ ಗ್ರಾಮ ಪಂಚಾಯತ ಗ್ರಾಮ ಲೆಕ್ಕಿಗ ರವಿ ಕುಲಕರ್ಣಿಯಿಂದ ರೈತರ ಬಳಿ 100 ರಿಂದ 200 ರೂ ಹಣ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ.
ಹೊಕ್ರಾಣಿ ಗ್ರಾಮದಲ್ಲಿ 1500ಕ್ಕೂ ಹೆಚ್ಚು ಪಹಣಿಗಳ ಜೊತೆ ಹಣ ವಸೂಲಿ ಮಾಡಲಾಗಿದೆ ಎಂದು ಹೇಳಲಾಗಿದೆ. ಮೊದಲೇ ಭೀಕರ ಬರಗಾಲಕ್ಕೆ ತುತ್ತಾದ ರಾಯಚೂರು ಜಿಲ್ಲೆ ಒಂದೆಡೆಯಾದ್ರೆ ಇದೇ ಜಿಲ್ಲೆಯಲ್ಲಿ ಬರಗಾಲಕ್ಕೆ ಬರಬೇಕಾದ ಪರಿಹಾರದಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.