ರಾಯಚೂರು : ಪ್ರತಿವರ್ಷ ಪಿಓಪಿ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಪರಿಸರ ನಾಶ ಆಗುವುದಲ್ಲದೆ ಜಲಮೂಲ ಸಹ ಕಲುಷಿತವಾಗುತ್ತಿರುವುದು ದಿನದಿಂದ ದಿನಕ್ಕೆ ನಾವು ನೋಡುತ್ತಿದ್ದೇವೆ. ಆದರೂ ಸಹ ಪಿಒಪಿ ಗಣಪತಿಗಳನ್ನ ಬಿಟ್ಟು ಮಣ್ಣಿನ ಗಣಪತಿ ಗಳನ್ನು ಪ್ರತಿಷ್ಠಾಪನೆ ಮಾಡುವಲ್ಲಿ ಭಕ್ತಗಣ ವಿಫಲವಾಗುತ್ತಿದೆ. ಈ ನಡುವೆ ಇಂಥವರಿಗೆ ಮಾದರಿ ಎಂಬಂತೆ 501 ಮಣ್ಣಿನ ಗಣಪತಿಗಳನ್ನು ಸಿಂಧನೂರಿನ ಸೇವಾಸಿರಿ ಟ್ರಸ್ಟ್ ವತಿಯಿಂದ ವಿತರಣೆ ಮಾಡುತ್ತಿರುವುದು ಗಮನಾರ್ಹವಾಗಿದೆ.
ಸಿಂಧನೂರಿನ ಸೇವಾ ಸಿರಿ ಟ್ರಸ್ಟ್ ವತಿಯಿಂದ ಜಿಲ್ಲೆಯಾದ್ಯಂತ 501 ಮಣ್ಣಿನ ಗಣಪತಿ ವಿತರಿಸಲಾಗುತ್ತಿದೆ ಎಂದು ರಾಯಚೂರು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ನಾಗವೇಣಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ. ಸೇವಾ ಸಿರಿ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಹಾಗೂ ತಂಡದಿಂದ ಈ ಬಾರಿಯ ಗಣೇಶ್ ಉತ್ಸವಕ್ಕೆ 12 ಇಂಚಿನ 350 ಗಣಪತಿಗಳು 18 ಇಂಚಿನ 150 ಗಣಪತಿಯನ್ನು ವಿತರಿಸಪಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 60 ರಿಂದ 70 ಮಣ್ಣಿನ ಗಣಪತಿ ಗಳನ್ನು ವಿತರಿಸಲಾಗುತ್ತಿದ್ದು, ಗಣಪತಿ ಒಳಗೆ ಹಣ್ಣಿನ, ತರಕಾರಿ ಬೀಜಗಳನ್ನು ಅಳವಡಿಸಿರುವುದು ವಿಶೇಷವಾಗಿದೆ.
ಗಣಪತಿ ಪ್ರತಿಷ್ಠಾಪನೆ ನಂತರ ಅವುಗಳನ್ನು ವಿಸರ್ಜನೆ ಮಾಡುವ ಬದಲು ಬಕೆಟ್ ಅಥವಾ ಬಾಟಲ್ ಗಳಲ್ಲಿ ಸಂಗ್ರಹಿಸಿಟ್ಟರೆ ಗಣಪತಿ ಒಳಗಡೆ ಅಳವಡಿಸಲಾದ ಹಣ್ಣಿನ ಬೀಜ ಅಥವಾ ತರಕಾರಿ ಬೀಜ ಮೊಳಕೆ ಒಡೆದು ಸಸಿ ಬರುತ್ತದೆ ಎಂದು ಈ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅನ್ನಪೂರ್ಣ, ಪ್ರದೀಪ್,ಗದ್ದೆಮ್ಮ ಹಾಗೂ ಇನ್ನಿತರರು ಇದ್ದರು.